ವಿವೇಕ ಚೂಡಾಮಣಿ - 426- 450

ಜೀವನ್ಮುಕ್ತನ ಲಕ್ಷಣಗಳು

ಸ್ಥಿತಪ್ರಜ್ಞೋ ಯತಿರಯಂ ಯಃ ಸದಾನಂದಮಶ್ನುತೇ .
ಬ್ರಹ್ಮಣ್ಯೇವ ವಿಲೀನಾತ್ಮಾ ನಿರ್ವಿಕಾರೋ ವಿನಿಷ್ಕ್ರಿಯಃ .. 426..

ಯಾರು ಬ್ರಹ್ಮನಲ್ಲಿಯೇ ಅಂತಃಕರಣವನ್ನು ಲೀನವಾಗಿಸಿಕೊಂಡು, ಸರ್ವವಿಕಾರರಹಿತನಾಗಿ, ಸರ್ವಕರ್ಮರಹಿತನಾಗಿ, ಯಾವಾಗಲೂ ಆನಂದದಿಂದಿರುವನೋ, ಆ ಯತಿಯೇ ಸ್ಥಿತಪ್ರಜ್ಞನು.

 ಬ್ರಹ್ಮಾತ್ಮನೋಃ ಶೋಧಿತಯೋರೇಕಭಾವಾವಗಾಹಿನೀ .
ನಿರ್ವಿಕಲ್ಪಾ ಚ ಚಿನ್ಮಾತ್ರಾ ವೃತ್ತಿಃ ಪ್ರಜ್ಞೇತಿ ಕಥ್ಯತೇ .
ಸುಸ್ಥಿತಾಽಸೌ ಭವೇದ್ಯಸ್ಯ ಸ್ಥಿತಪ್ರಜ್ಞಃ ಸ ಉಚ್ಯತೇ .. 427..

(ತತ್ವಮಸಿ ಎಂಬ ಮಹಾವಾಕ್ಯದಿಂದ) ಪರಮಾತ್ಮ ಜೀವಾತ್ಮ ಇವರನ್ನು ಐಕ್ಯಭಾವವನ್ನು ಗ್ರಹಿಸುವ, ದ್ವಂದ್ವವಿಲ್ಲದ, ಜ್ಞಾನದಲ್ಲಿ ಮಾತ್ರ  ಆಸಕ್ತಿಯಿರಿಸಿದ ವೃತ್ತಿಯನ್ನು ಪ್ರಜ್ಞೆ ಎನ್ನುತ್ತಾರೆ. ಯಾರಲ್ಲಿ ಈ ಪ್ರಜ್ಞೆಯು ಸ್ಥಿರವಾಗಿರುವುದೊ ಅವನು ಸ್ಥಿತಪ್ರಜ್ಞನು ಎನಿಸಿಕೊಳ್ಳುತ್ತಾನೆ.

ಯಸ್ಯ ಸ್ಥಿತಾ ಭವೇತ್ಪ್ರಜ್ಞಾ ಯಸ್ಯಾನಂದೋ ನಿರಂತರಃ .
ಪ್ರಪಂಚೋ ವಿಸ್ಮೃತಪ್ರಾಯಃ ಸ ಜೀವನ್ಮುಕ್ತ ಇಷ್ಯತೇ .. 428..

ಯಾರ ಪ್ರಜ್ಞೆಯು ಸ್ಥಿರವಾಗಿರುವದೋ, ಯಾರ ಆನಂದ ನಿರಂತರವಾಗಿರುವದೋ, ಯಾರಿಗೆ ಬಾಹ್ಯ ಪ್ರಪಂಚ ಮರೆತು ಹೋಗಿರುವದೋ, ಅವನನ್ನು ಜೀವನ್ಮುಕ್ತ ಎನ್ನುತ್ತಾರೆ.

ಲೀನಧೀರಪಿ ಜಾಗರ್ತಿ ಜಾಗ್ರದ್ಧರ್ಮವಿವರ್ಜಿತಃ .
ಬೋಧೋ ನಿರ್ವಾಸನೋ ಯಸ್ಯ ಸ ಜೀವನ್ಮುಕ್ತ ಇಷ್ಯತೇ .. 429..

ಯಾರು ತನ್ನ ವೃತ್ತಿ(ಪರಮಾತ್ಮನಲ್ಲಿ) ಲೀನವಾಗಿದ್ದರೂ ಜಾಗ್ರತನಾಗಿರುತ್ತಾನೋ, ಆದರೆ ಜಾಗ್ರತಾವಸ್ಥೆಯ  ಲಕ್ಷಣಗಳಿಲ್ಲದವನೋ, ಯಾರ ಜ್ಞಾನವು ವಿಷಯ-ವಾಸನಾರಹಿತವಾಗಿರುವುದೋ, ಅವನನ್ನು ಜೀವನ್ಮುಕ್ತ ಎನ್ನುತ್ತಾರೆ

ಶಾಂತಸಂಸಾರಕಲನಃ ಕಲಾವಾನಪಿ ನಿಷ್ಕಲಃ .
 ಯಃ ಸಚಿತ್ತೋಽಪಿ ನಿಶ್ಚಿತ್ತಃ ಸ ಜೀವನ್ಮುಕ್ತ ಇಷ್ಯತೇ .. 430..  

ಯಾರು ಸಂಸಾರದ ಚಿಂತೆಯನ್ನೆಲ್ಲ ತ್ಯಜಿಸಿರುವನೋ, ಯಾರು ಅಂಗಾಂಗವಯಳ್ಳವನಾಗಿದ್ದರೂ ಅವಯವರಹಿತನಂತಿರುವನೊ, ಯಾರು ಚಿತ್ತವುಳ್ಳವನಾಗಿದ್ದರೂ ಚಿತ್ತನಿಲ್ಲದವನಂತಿರುವನೊ, ಅವನು ಜೀವನ್ಮುಕ್ತನು ಎನಿಸುವನು.

ವರ್ತಮಾನೇಽಪಿ ದೇಹೇಽಸ್ಮಿಂಛಾಯಾವದನುವರ್ತಿನಿ .
ಅಹಂತಾಮಮತಾಽಭಾವೋ ಜೀವನ್ಮುಕ್ತಸ್ಯ ಲಕ್ಷಣಂ .. 431..

ನೆರಳಿನಂತೆ ಅನುಸರಿಸಿಕೊಂಡಿರುವ ದೇಹದಲ್ಲಿ ಇದ್ದರೂ, ಅಹಂಕಾರ, ಮಮಕಾರ ಇತ್ಯಾದಿಗಳು ಇಲ್ಲದಿರುವದು ಜೀವನ್ಮುಕ್ತನ ಲಕ್ಷಣವು.

ಅತೀತಾನನುಸಂಧಾನಂ ಭವಿಷ್ಯದವಿಚಾರಣಂ .
ಔದಾಸೀನ್ಯಮಪಿ ಪ್ರಾಪ್ತೇ ಜೀವನ್ಮುಕ್ತಸ್ಯ ಲಕ್ಷಣಂ .. 432..

ಅತೀತವನ್ನು (ಕಳೆದುಹೋಗಿದ್ದನ್ನು, ಭೂತಕಾಲವನ್ನು) ಸ್ಮರಿಸಿಕೊಳ್ಳದಿರುವದು, ಮತ್ತು ಭವಿಷ್ಯದ ಬಗ್ಗೆ ಯೋಚಿಸದಿರವದು, ವರ್ತಮಾನದಲ್ಲಿ ಪ್ರಾಪ್ತವಾಗುವ ಸುಖ-ದುಃಖಗಳಲ್ಲೂ ಉದಾಸೀನತೆ, ಇವು ಜೀವನ್ಮುಕ್ತನ ಲಕ್ಷಣಗಳು.

ಗುಣದೋಷವಿಶಿಷ್ಟೇಽಸ್ಮಿನ್ ಸ್ವಭಾವೇನ ವಿಲಕ್ಷಣೇ .
ಸರ್ವತ್ರ ಸಮದರ್ಶಿತ್ವಂ ಜೀವನ್ಮುಕ್ತಸ್ಯ ಲಕ್ಷಣಂ .. 433..

ಗುಣದೋಷಗಳಿಂದ ಕೂಡಿ, ಸ್ವಭಾವದಿಂದ ಬೇರೆ-ಬೇರೆಯಾಗಿರುವ ಈ ಜಗತ್ತಿನಲ್ಲಿ, ಎಲ್ಲೆಲ್ಲಿಯೂ ಸಮಾನದೃಷ್ಟಿಯಿಂದ ನೋಡುವುದು ಜೀವನ್ಮುಕ್ತನ ಲಕ್ಷಣವು.

ಇಷ್ಟಾನಿಷ್ಟಾರ್ಥಸಂಪ್ರಾಪ್ತೌ ಸಮದರ್ಶಿತಯಾಽಽತ್ಮನಿ .
ಉಭಯತ್ರಾವಿಕಾರಿತ್ವಂ ಜೀವನ್ಮುಕ್ತಸ್ಯ ಲಕ್ಷಣಂ .. 434..

ಇಷ್ಟವಾದ ಅಥವಾ ಅನಿಷ್ಟ ವಾದ ವಿಷಯಗಳು ಪ್ರಾಪ್ತವಾದಾಗ, ಸಮದೃಷ್ಟಿಯಿಂದ ಈ ಎರಡರ ವಿಷಯವಾಗಿಯೂ ವಿಚಲಿತನಾಗದೇ,  ಸ್ಥಿತಪ್ರಜ್ಞನಾಗಿರುವದು ಜೀವನ್ಮುಕ್ತನ  ಲಕ್ಷಣವು.

ಬ್ರಹ್ಮಾನಂದರಸಾಸ್ವಾದಾಸಕ್ತಚಿತ್ತತಯಾ ಯತೇಃ .
ಅಂತರ್ಬಹಿರವಿಜ್ಞಾನಂ ಜೀವನ್ಮುಕ್ತಸ್ಯ ಲಕ್ಷಣಂ .. 435..

ಬ್ರಹ್ಮಾನಂದರಸವನ್ನು ಆಸ್ವಾದಿಸುವದರಲ್ಲಿ ಚಿತ್ತವು ಆಸಕ್ತವಾಗಿರುವುದರಿಂದ,  ಅಂತರ್ ಮತ್ತು ಬಾಹ್ಯ ಅರಿವು ಇಲ್ಲದಿರುವದು, ಜೀವನ್ಮುಕ್ತ ಯತಿಯ ಲಕ್ಷಣವು.

ದೇಹೇಂದ್ರಿಯಾದೌ ಕರ್ತವ್ಯೇ ಮಮಾಹಂಭಾವವರ್ಜಿತಃ .
ಔದಾಸೀನ್ಯೇನ ಯಸ್ತಿಷ್ಠೇತ್ಸ ಜೀವನ್ಮುಕ್ತಲಕ್ಷಣಃ .. 436..  

ಯಾರು ದೇಹ ಇಂದ್ರಿಯಗಳು ಇತ್ಯಾದಿಗಳಲ್ಲಿಯೂ, ಮಾಡತಕ್ಕ ಕೆಲಸದಲ್ಲಿಯೂ, "ನಾನು, ನನ್ನದು" ಎಂಬ ಭಾವವಿಲ್ಲದೆ
ಉದಾಸೀನನಾಗಿರುತ್ತಾನೋ ಅವನು  ಜೀವನ್ಮುಕ್ತನ ಲಕ್ಷಣವುಳ್ಳವನು.

ವಿಜ್ಞಾತ ಆತ್ಮನೋ ಯಸ್ಯ ಬ್ರಹ್ಮಭಾವಃ ಶ್ರುತೇರ್ಬಲಾತ್ .
ಭವಬಂಧವಿನಿರ್ಮುಕ್ತಃ ಸ ಜೀವನ್ಮುಕ್ತಲಕ್ಷಣಃ .. 437..  

ಯಾರಿಗೆ ಶ್ರುತಿಯ(ವೇದಗಳ) ಬಲದಿಂದ ತನ್ನ ಬ್ರಹ್ಮಭಾವವು ತಿಳಿದಿರುವುದೊ, ಯಾರು ಸಂಸಾರಬಂಧದಿಂದ ಮುಕ್ತನಾಗಿರುವನೋ ಅವನು ಜೀವನ್ಮುಕ್ತನ ಲಕ್ಷಣವುಳ್ಳವನು.

ದೇಹೇಂದ್ರಿಯೇಷ್ವಹಂಭಾವ ಇದಂಭಾವಸ್ತದನ್ಯಕೇ .
ಯಸ್ಯ ನೋ ಭವತಃ ಕ್ವಾಪಿ ಸ ಜೀವನ್ಮುಕ್ತ ಇಷ್ಯತೇ .. 438..

ಯಾರಿಗೆ ದೇಹೇಂದ್ರಿಯಗಳಲ್ಲಿ "ನಾನು" ಎಂಬ ಭಾವವೂ, ಅವುಗಳಿಗಿಂತ ಬೇರೆ ವಸ್ತುಗಳಲ್ಲಿ "ಇದು"(ಪರಕೀಯ)
ಎಂಬ ಭಾವವೂ ಎಂದಿಗೂ ಉಂಟಾಗುವುದಿಲ್ಲವೊ, ಅವನು ಜೀವನ್ಮುಕ್ತನು ಎನಿಸುವನು.

ಜೀವೇಶೋಭಯಸಂಸಾರರೂಪದುರ್ವಾಸನೋಜ್ಝಿತಾ .
ಸಾ ಸರ್ವದಾ ಭವೇದ್ಯಸ್ಯ ಸ ಜೀವನ್ಮುಕ್ತ ಇಷ್ಯತೇ ..

ನ ಪ್ರತ್ಯಗ್ಬ್ರಹ್ಮಣೋರ್ಭೇದಂ ಕದಾಪಿ ಬ್ರಹ್ಮಸರ್ಗಯೋಃ .
ಪ್ರಜ್ಞಯಾ ಯೋ ವಿಜಾನಿತಿ ಸ ಜೀವನ್ಮುಕ್ತ ಇಷ್ಯತೇ .. 439..

ಯಾರು ಜೀವ ಮತ್ತು ಬ್ರಹ್ಮ ಇವರಲ್ಲಾ ಗಲಿ, ಬ್ರಹ್ಮ ಮತ್ತು ಜಗತ್ತು. ಇವುಗಳಲ್ಲಾ ಗಲಿ,ಯಥಾರ್ಥದೃಷ್ಟಿಯಿಂದ ಭೇದವನ್ನು ಯಾವಾಗಲೂ ಎಣಿಸುವದಿಲ್ಲವೋ, ಅವನು ಜೀವನ್ಮುಕ್ತನು ಎನಿಸುವನು.

ಸಾಧುಭಿಃ ಪೂಜ್ಯಮಾನೇಽಸ್ಮಿನ್ಪೀಡ್ಯಮಾನೇಽಪಿ ದುರ್ಜನೈಃ .
ಸಮಭಾವೋ ಭವೇದ್ಯಸ್ಯ ಸ ಜೀವನ್ಮುಕ್ತ ಇಷ್ಯತೇ .. 440..

ಈ ಶರೀರವನ್ನು ಗೌರವಿಸುವ ಸಾಧುಗಳಲ್ಲಿ ಹಾಗೂ ಅದನ್ನು ಪೀಡಿಸುವ ದುಷ್ಟರಲ್ಲಿ  ಯಾರಿಗೆ ಸಮಭಾವವಿರುವುದೊ,
ಅವನು ಜೀವನ್ಮುಕ್ತನು ಎನಿಸಿಕೊಳ್ಳುತ್ತಾನೆ.

ಯತ್ರ ಪ್ರವಿಷ್ಟಾ ವಿಷಯಾಃ ಪರೇರಿತಾ
    ನದೀಪ್ರವಾಹಾ ಇವ ವಾರಿರಾಶೌ .
ಲೀನಂತಿ ಸನ್ಮಾತ್ರತಯಾ ನ ವಿಕ್ರಿಯಾಂ
    ಉತ್ಪಾದಯಂತ್ಯೇಷ ಯತಿರ್ವಿಮುಕ್ತಃ .. 441..

ಸಮುದ್ರವನ್ನು ಪ್ರವೇಶಿಸಿದ ನದಿಯ ಪ್ರವಾಹಗಳು ಲೀನವಾಗುವಂತೆ, ಇತರರಿಂದ ಪ್ರೇರಿತವಾಗಿ ಬರುವ ವಿಷಯಗಳು
ಪ್ರವೇಶಿಸಿ, ಬ್ರಹಾತ್ಮ  ಭಾವನೆಯಿಂದ ಯಾರಲ್ಲಿ ಲೀನವಾಗುವುವೋ ಮತ್ತು ಹಾಗಾದರೂ ಅವನಲ್ಲಿ ಯಾವ
ವಿಕಾರವನ್ನೂ ಉಂಟುಮಾಡುವುದಿಲ್ಲವೊ, ಅವನೇ ಜೀವನ್ಮುಕ್ತನು.

ವಿಜ್ಞಾತಬ್ರಹ್ಮತತ್ತ್ವಸ್ಯ ಯಥಾಪೂರ್ವಂ ನ ಸಂಸೃತಿಃ .
ಅಸ್ತಿ ಚೇನ್ನ ಸ ವಿಜ್ಞಾತಬ್ರಹ್ಮಭಾವೋ ಬಹಿರ್ಮುಖಃ .. 442..

ಬ್ರಹ್ಮತತ್ತ್ವವನ್ನು ಅರಿತುಕೊಂಡವನಿಗೆ ಇಂದ್ರಿಯಗಳ ಸೆಳೆತವಿರುವುದಿಲ್ಲ; ಹಾಗೇನಾದರೂ ಸೆಳೆತವಿದ್ದರೆ ಅವನು
ಬ್ರಹ್ಮತತ್ತ್ವವನ್ನು ಅರಿತುಕೊಂಡವನಲ್ಲ. ಯಾಕೆಂದರೆ ಇಂದ್ರಿಯಗಳು ಬಹಿರ್ಮುಖ ಆಗಿರುತ್ತವೆ.

ಪ್ರಾಚೀನವಾಸನಾವೇಗಾದಸೌ ಸಂಸರತೀತಿ ಚೇತ್ .
ನ ಸದೇಕತ್ವವಿಜ್ಞಾನಾನ್ಮಂದೀ ಭವತಿ ವಾಸನಾ .. 443..

ಪೂರ್ವ ಜನ್ಮಗಳ ಪ್ರಭಾವದಿಂದ, ಸಂಸಾರದಲ್ಲಿ ಆಸಕ್ತಿಯುಂಟಾಗುವದು ಎನ್ನುವದು ನಿಜವಲ್ಲ. ಯಾಕೆಂದರೆ ಬ್ರಹ್ಮನ ಏಕತ್ವಜ್ಞಾನದಿಂದ  ವಾಸನಾಸಕ್ತಿ ಮಂದವಾಗುತ್ತದೆ.

ಅತ್ಯಂತಕಾಮುಕಸ್ಯಾಪಿ ವೃತ್ತಿಃ ಕುಂಠತಿ ಮಾತರಿ .
ತಥೈವ ಬ್ರಹ್ಮಣಿ ಜ್ಞಾತೇ ಪೂರ್ಣಾನಂದೇ ಮನೀಷಿಣಃ .. 444..

ಅತ್ಯಂತ ಕಾಮುಕನಿಗೆ ಕೂಡ ತನ್ನ ತಾಯಿಯ ವಿಷಯದಲ್ಲಿ ಕಾಮಪ್ರವೃತ್ತಿಯು ಹಿಂದೆ ಸರಿಯುತ್ತದೆ; ಪೂರ್ಣಾನಂದವಾದ ಬ್ರಹ್ಮವನ್ನು ಅರಿತುಕೊಂಡಾಗ ಜ್ಞಾನಿಗೂ ಹಾಗೆಯೇ (ಸಂಸಾರವೃತ್ತಿಯು ಹಿಂಜರಿಯುತ್ತದೆ).

ನಿದಿಧ್ಯಾಸನಶೀಲಸ್ಯ ಬಾಹ್ಯಪ್ರತ್ಯಯ ಈಕ್ಷ್ಯತೇ .
ಬ್ರವೀತಿ ಶ್ರುತಿರೇತಸ್ಯ ಪ್ರಾರಬ್ಧಂ ಫಲದರ್ಶನಾತ್ .. 445..

ಧ್ಯಾನದಲ್ಲಿ ಮಗ್ನನಾಗಿರುವ ಜ್ಞಾನಿಗೆ ಕೂಡ ಬಾಹ್ಯವಿಷಯಗಳ ಅನುಭೂತಿ ಕಂಡುಬರುತ್ತದೆ. ಇದು ಪ್ರಾರಬ್ಧಕರ್ಮದ ಫಲವೆಂದು ಶ್ರುತಿಯು ಹೇಳುತ್ತದೆ. ಹಾಗೂ ನಿಜ ಜೀವನದಲ್ಲಿ ಕಂಡುಬರುತ್ತದೆ.

ಸುಖಾದ್ಯನುಭವೋ ಯಾವತ್ತಾವತ್ಪ್ರಾರಬ್ಧಮಿಷ್ಯತೇ .
ಫಲೋದಯಃ ಕ್ರಿಯಾಪೂರ್ವೋ ನಿಷ್ಕ್ರಿಯೋ ನ ಹಿ ಕುತ್ರಚಿತ್ .. 446..

ಸುಖದುಃಖಾದಿಗಳ ಅನುಭವವು ಎಲ್ಲಿಯವರೆಗೆ ಇರುವುದೊ, ಅಲ್ಲಿಯವರೆಗೆ ಪ್ರಾರಬ್ಧಕರ್ಮವಿರುವದು ಕಂಡುಬರುತ್ತದೆ;
ಯಾಕೆಂದರೆ ಫಲವಾಗಲು ಮೊದಲು ಕರ್ಮವು ಆಗಬೇಕು. ಕರ್ಮವಿಲ್ಲದೆ ಫಲವುಂಟಾಗಲಾರದು.

ಅಹಂ ಬ್ರಹ್ಮೇತಿ ವಿಜ್ಞಾನಾತ್ಕಲ್ಪಕೋಟಿಶತಾರ್ಜಿತಂ .
ಸಂಚಿತಂ ವಿಲಯಂ ಯಾತಿ ಪ್ರಬೋಧಾತ್ಸ್ವಪ್ನಕರ್ಮವತ್ .. 447..

ಸ್ವಪ್ನದಲ್ಲಿ ಮಾಡಿದ ಕರ್ಮವು ಎಚ್ಚರವಾದ ಮೇಲೆ ನಾಶವಾಗುನಂತೆ, "ನಾನು ಬ್ರಹ್ಮವು" ಎಂಬ ಜ್ಞಾನದಿಂದ ನೂರಾರು ಕೋಟಿ ಕಲ್ಪಗಳಿಂದ ಸಂಪಾದಿಸಿರುವ ಕರ್ಮವೂ ಕೂಡ ನಾಶವಾಗುತ್ತದೆ.

ಯತ್ಕೃತಂ ಸ್ವಪ್ನವೇಲಾಯಾಂ ಪುಣ್ಯಂ ವಾ ಪಾಪಮುಲ್ಬಣಂ .
ಸುಪ್ತೋತ್ಥಿತಸ್ಯ ಕಿಂತತ್ಸ್ಯಾತ್ಸ್ವರ್ಗಾಯ ನರಕಾಯ ವಾ .. 448..

ಸ್ವಪ್ನದಲ್ಲಿ ಮಾಡಿದ್ದ ಪುಣ್ಯಕರ್ಮವಾಗಲೀ ಅಥವಾ ಭೀಕರವಾದ ಪಾಪವಾಗಲೀ, ನಿದ್ರೆಯಿಂದ ಎಚ್ಚತ್ತ ಮೇಲೆ ಸ್ವರ್ಗಕ್ಕೆ ಅಥವಾ ನರಕಕ್ಕೆ ಕಾರಣವಾಗುವುದೆ?

ಸ್ವಮಸಂಗಮುದಾಸೀನಂ ಪರಿಜ್ಞಾಯ ನಭೋ ಯಥಾ .
ನ ಶ್ಲಿಷ್ಯತಿ ಚ ಯತ್ಕಿಂಚಿತ್ಕದಾಚಿದ್ಭಾವಿಕರ್ಮಭಿಃ .. 449..  

ಆಕಾಶದಂತೆ ತನ್ನ ಆತ್ಮನು ಅಸಂಗನೆಂದೂ, ಉದಾಸೀನನೆಂದೂ ತಿಳಿದುಕೊಂಡ ಯತಿಯು,  ಮುಂದೆ ಮಾಡಬೇಕಾದ ಕರ್ಮಗಳಿಂದ ಎಂದಿಗೂ ಸ್ವಲ್ಪವೂ ಆಸಕ್ತನಾಗುವದಿಲ್ಲ. (ಅಂಟಿಕೊಳ್ಳುವದಿಲ್ಲ)

ನ ನಭೋ ಘಟಯೋಗೇನ ಸುರಾಗಂಧೇನ ಲಿಪ್ಯತೇ .
ತಥಾತ್ಮೋಪಾಧಿಯೋಗೇನ ತದ್ಧರ್ಮೈರ್ನೈವ ಲಿಪ್ಯತೇ .. 450..

ಹೇಗೆ (ಗಡಿಗೆಯಲ್ಲಿ ಕಾಣುವ) ಆಕಾಶವು ಗಡಿಗೆಯ ಮೂಲಕ (ಅದರಲ್ಲಿರುವ) ಮದ್ಯದ ವಾಸನೆಯಿಂದ ಕಲುಷಿತವಾಗುವುದಿಲ್ಲವೊ, ಹಾಗೆಯೇ ಆತ್ಮನು ಉಪಾಧಿಯ ಸಂಬಂಧದ ಮೂಲಕ ಅದರ ಧರ್ಮಗಳಿಂದ ಲಿಪ್ತನಾಗುವುದಿಲ್ಲ.

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60