ವಿವೇಕ ಚೂಡಾಮಣಿ - 326-350


 ವಿಷಯೇಷ್ವಾವಿಶಚ್ಚೇತಃ ಸಂಕಲ್ಪಯತಿ ತದ್ಗುಣಾನ್ .
ಸಮ್ಯಕ್ಸಂಕಲ್ಪನಾತ್ಕಾಮಃ ಕಾಮಾತ್ಪುಂಸಃ ಪ್ರವರ್ತನಂ .. 326..
 
ವಿಷಯ ವಸ್ತುಗಳ ಕಡೆ ತಿರುಗಿದ ಮನಸ್ಸು ಅವುಗಳ ಗುಣಗಳ ಬಗ್ಗೆ ಯೋಚಿಸುತ್ತದೆ. ಅದರಿಂದ ಆ ವಸ್ತುಗಳಲ್ಲಿ ಕಾಮವಾಗುತ್ತದೆ. ಕಾಮವಾದ ಮೇಲೆ ಮನುಷ್ಯನು ಆ ವಸ್ತುವನ್ನು ಪಡೆಯಲು ಪ್ರಯತ್ನಿಸುತ್ತಾನೆ. 

ಅತಃ ಪ್ರಮಾದಾನ್ನ ಪರೋಽಸ್ತಿ ಮೃತ್ಯುಃ
    ವಿವೇಕಿನೋ ಬ್ರಹ್ಮವಿದಃ ಸಮಾಧೌ .
ಸಮಾಹಿತಃ ಸಿದ್ಧಿಮುಪೈತಿ ಸಮ್ಯಕ್
    ಸಮಾಹಿತಾತ್ಮಾ ಭವ ಸಾವಧಾನಃ .. 327..

ಆದುದರಿಂದ ವಿವೇಕಿಯಾದ ಬ್ರಹ್ಮಜ್ಞಾನಿಗೆ,  ಧ್ಯಾನದಲ್ಲಿ ಎಚ್ಚರಿಕೆ ತಪ್ಪುವುದಕ್ಕಿಂತ ಬೇರೆ ಮೃತ್ಯುವಿರುವುದಿಲ್ಲ. (ಬ್ರಹ್ಮಜ್ಞಾನದ ಧ್ಯಾನದಲ್ಲಿ) ಚೆನ್ನಾಗಿ ಲೀನನಾದವನೇ ಸಿದ್ಧಿಯನ್ನು ಹೊಂದುತ್ತಾನೆ. ಆದುದರಿಂದ ಎಚ್ಚರಿಕೆಯಿಂದ ಮನಸ್ಸನ್ನು ಧ್ಯಾನದಲ್ಲಿ ಕೇಂದ್ರೀಕರಿಸು.

ತತಃ ಸ್ವರೂಪವಿಭ್ರಂಶೋ ವಿಭ್ರಷ್ಟಸ್ತು ಪತತ್ಯಧಃ .
ಪತಿತಸ್ಯ ವಿನಾ ನಾಶಂ ಪುನರ್ನಾರೋಹ ಈಕ್ಷ್ಯತೇ .. 328..

ಎಚ್ಚರ ತಪ್ಪುವದರಿಂದ ಮನುಷ್ಯನು ಅವನು ನಿಜ ರೂಪದಿಂದ ದೂರ ಸರಿಯುತ್ತಾನೆ. ಹೀಗೆ ದೂರ ಸರಿದು ದಾರಿ ತಪ್ಪಿದವನು ಕೆಳಗೆ ಬೀಳುತ್ತಾನೆ. ಬಿದ್ದವನು ನಾಶವಾಗುತ್ತಾನೇ ಹೊರತು ಅವನು ಮತ್ತೆ ಮೇಲೆಳುವದು ಕಂಡುಬರುವದು ಬಹಳ ವಿರಳ. 

ಸಂಕಲ್ಪಂ ವರ್ಜಯೇತ್ತಸ್ಮಾತ್ಸರ್ವಾನರ್ಥಸ್ಯ ಕಾರಣಂ .
    ಅಪಥ್ಯಾನಿ ಹಿ ವಸ್ತೂನಿ ವ್ಯಾಧಿಗ್ರಸ್ತೋ ಯಥೋತ್ಸೃಜೇ . 
ಜೀವತೋ ಯಸ್ಯ ಕೈವಲ್ಯಂ ವಿದೇಹೇ ಸ ಚ ಕೇವಲಃ .
    ಯತ್ಕಿಂಚಿತ್ ಪಶ್ಯತೋ ಭೇದಂ ಭಯಂ ಬ್ರೂತೇ ಯಜುಃಶ್ರುತಿಃ .. 329..

ವ್ಯಾಧಿಯಾದವನು ಅಪಥ್ಯವಾದ ವಸ್ತುಗಳನ್ನು ಬಿಟ್ಟ ಹಾಗೆ, ಸಂಕಲ್ಪದಿಂದ ವಿಷಯ ವಸ್ತುಗಳ ಬಗ್ಗೆ ಯೋಚನೆಯನ್ನು ಬಿಡಬೇಕು ಯಾಕೆಂದರೆ ಎಲ್ಲ ಅನರ್ಥಗಳಿಗೂ ಅದೇ ಕಾರಣ. ಜೀವಂತವಾಗಿದ್ದಾಗಲೇ ಯಾರು ಸರ್ವಸಂಗಪರಿತ್ಯಾಗಿಗಳಾಗಿರುತ್ತಾರೋ, ಅವರಿಗೆ ಸತ್ತ ನಂತರ ಕೈವಲ್ಯ ಸಿಕ್ಕೇ ಸಿಗುತ್ತದೆ. (ಹಾಗೇ ಜೀವಿತವಾಗಿದ್ದಾವ ಕೈವಲ್ಯ ಸಿಗದಿದ್ದವರಿಗೆ ಸತ್ತ ಮೇಲೂ ಅದು ದೊರಕದು) 
 
ಸ್ವಲ್ಪವಾದರೂ ಭೇದ (ಆತ್ಮ - ಪರಮಾತ್ಮರಲ್ಲಿ ಭೇದ - ಅಹಂಕಾರ) ನೋಡುವವರು  ಭಯ ಪಡಬೇಕು ಎಂದು ಯಜುರ್ವೇದ ಹೇಳಿದೆ. 

ಯದಾ ಕದಾ ವಾಪಿ ವಿಪಶ್ಚಿದೇಷ
    ಬ್ರಹ್ಮಣ್ಯನಂತೇಽಪ್ಯಣುಮಾತ್ರಭೇದಂ .
ಪಶ್ಯತ್ಯಥಾಮುಷ್ಯ ಭಯಂ ತದೈವ
    ಯದ್ವೀಕ್ಷಿತಂ ಭಿನ್ನತಯಾ ಪ್ರಮಾದಾತ್ .. 330.. 

ಯಾವಾಗ ಈ ಜ್ಞಾನಿಯು ಅನಂತವಾದ ಬ್ರಹ್ಮನಲ್ಲಿ ಅಣುಮಾತ್ರವಾದರೂ ಭೇದವನ್ನು ನೋಡಿದರೆ, ಪ್ರಮಾದದಿಂದ  ನೋಡಿದ ಭೇದವೇ ಅವನಿಗೆ ಭಯಕ್ಕೆ ಕಾರಣವಾಗುತ್ತದೆ.

ಶ್ರುತಿಸ್ಮೃತಿನ್ಯಾಯಶತೈರ್ನಿಷಿದ್ಧೇ
     ದೃಶ್ಯೇಽತ್ರ ಯಃ ಸ್ವಾತ್ಮಮತಿಂ ಕರೋತಿ .
ಉಪೈತಿ ದುಃಖೋಪರಿ ದುಃಖಜಾತಂ
    ನಿಷಿದ್ಧಕರ್ತಾ ಸ ಮಲಿಮ್ಲುಚೋ ಯಥಾ .. 331..

ಶೃತಿ, ಸ್ಮೃತಿ ಮತ್ತು ನೂರಾರು ತರ್ಕಗಳಿಂದ ಮಿಥ್ಯೆ ಎಂದು ಸಾಬೀತಾಗಿರುವ ಬಾಹ್ಯ ವಸ್ತುಗಳ ಜೊತೆ ಯಾರು ತನ್ನನ್ನು ಗುರುತಿಸಿಕೊಳ್ಳುತ್ತಾನೋ, ಅವನು ನಿಷಿದ್ಧ ಕಾರ್ಯ ಮಾಡುವ ಕಳ್ಳನಂತೆ, ದುಃಖದ ನಂತರ ದುಃಖವನ್ನು ಅನುಭವಿಸುತ್ತಲೇ ಇರುತ್ತಾನೆ.

ಸತ್ಯಾಭಿಸಂಧಾನರತೋ ವಿಮುಕ್ತೋ
    ಮಹತ್ವಮಾತ್ಮೀಯಮುಪೈತಿ ನಿತ್ಯಂ .
ಮಿಥ್ಯಾಭಿಸಂಧಾನರತಸ್ತು ನಶ್ಯೇದ್
    ದೃಷ್ಟಂ ತದೇತದ್ಯದಚೌರಚೌರಯೋಃ .. 332.. 

ಯಾರು ಅದ್ವಿತೀಯ ಬ್ರಹ್ಮ ರೂಪದ ಸತ್ಯವನ್ನೇ ಹುಡುಕುತ್ತಲಿರುತ್ತಾನೋ, ಅವನು ಮುಕ್ತಿ ಹೊಂದಿ ತನ್ನ ಆತ್ಮದ ಮಹತ್ ರೂಪವನ್ನು ಹೊಂದುತ್ತಾನೆ. ಆದರೆ ಯಾರು ಮಿಥ್ಯೆಯಾದ ಈ ಜಗತ್ತನ್ನು ಅರಸುತ್ತ ಹೋಗುತ್ತಾನೆೋ ಅವನು ನಾಶ ಹೊಂದುತ್ತಾನೆ. ಈ ಸತ್ಯವನ್ನು ನಾವು ಸಾಧು ಮತ್ತು ಕಳ್ಳರ ವಿಷಯದಲ್ಲಿ ನೋಡಬಹುದು. 

ಯತಿರಸದನುಸಂಧಿಂ ಬಂಧಹೇತುಂ ವಿಹಾಯ
    ಸ್ವಯಮಯಮಹಮಸ್ಮೀತ್ಯಾತ್ಮದೃಷ್ಟೈವ ತಿಷ್ಠೇತ್
ಸುಖಯತಿ ನನು ನಿಷ್ಠಾ ಬ್ರಹ್ಮಣಿ ಸ್ವಾನುಭೂತ್ಯಾ
    ಹರತಿ ಪರಮವಿದ್ಯಾಕಾರ್ಯದುಃಖಂ ಪ್ರತೀತಂ .. 333..

ಯತಿಯು  ಬಂಧನಕ್ಕೆ ಕಾರಣೀಭೂತವಾದ ಅಸತ್ ಅನ್ನು ತ್ಯಜಿಸಿ 'ನಾನು ಸಾಕ್ಷಾತ್ ಬ್ರಹ್ಮ' ಎಂಬ ಆತ್ಮದೃಷ್ಟಿಯನ್ನು ಹೊಂದಬೇಕು. ಬ್ರಹ್ಮನಲ್ಲಿ ಸ್ಥಿರವಾದ ನಿಷ್ಠೆಯು, ಅವಿದ್ಯೆಯ ಕಾರಣದಿಂದ ಅನುಭವಿಸುವ ದುಃಖವನ್ನು ಹೋಗಲಾಡಿಸಿ, ಸುಖವನ್ನು ತರುತ್ತದೆ.

ಬಾಹ್ಯಾನುಸಂಧಿಃ ಪರಿವರ್ಧಯೇತ್ಫಲಂ 
    ದುರ್ವಾಸನಾಮೇವ ತತಸ್ತತೋಽಧಿಕಾಂ .
ಜ್ಞಾತ್ವಾ ವಿವೇಕೈಃ ಪರಿಹೃತ್ಯ ಬಾಹ್ಯಂ
    ಸ್ವಾತ್ಮಾನುಸಂಧಿಂ ವಿದಧೀತ ನಿತ್ಯಂ .. 334..

ಬಾಹ್ಯ ವಿಷಯಗಳ ಚಿಂತನೆ, ತನ್ನ ದುರ್ವಾಸನಾಯುಕ್ತ ಫಲವನ್ನು ಮತ್ತೂ ಮತ್ತೂ ಹೆಚ್ಚಿಸುತ್ತದೆ. ಅದಕ್ಕಾಗಿ ವಿವೇಚನೆಯಿಂದ ಬಾಹ್ಯ ವಿಷಯಗಳ ಚಿಂತನೆಯನ್ನು ಬಿಟ್ಟು, ನಿತ್ಯ ಆತ್ಮಾನುಸಂಧಾನವನ್ನು ಮಾಡಬೇಕು. 

ಬಾಹ್ಯೇ ನಿರುದ್ಧೇ ಮನಸಃ ಪ್ರಸನ್ನತಾ
    ಮನಃಪ್ರಸಾದೇ ಪರಮಾತ್ಮದರ್ಶನಂ .
ತಸ್ಮಿನ್ಸುದೃಷ್ಟೇ ಭವಬಂಧನಾಶೋ
   ಬಹಿರ್ನಿರೋಧಃ ಪದವೀ ವಿಮುಕ್ತೇಃ .. 335..

ಬಾಹ್ಯ ವಸ್ತುಗಳ ಚಿಂತೆಯನ್ನು ತ್ಯಜಿಸಿದಾಗ ಮನಸ್ಸು ಪ್ರಸನ್ನವಾಗುತ್ತದೆ. ಮನಸ್ಸು ಪ್ರಸನ್ನವಾದಾಗ ಪರಮಾತ್ಮನ ದರ್ಶನವಾಗುತ್ತದೆ. ಅದರಿಂದ ಭವಬಂಧನ ನಾಶವಾಗುತ್ತದೆ. ಹೀಗೆ, ಬಾಹ್ಯ ವಸ್ತುವನ್ನು ನಿರೋಧಿಸುವದರಿಂದ ಮುಕ್ತಿ ಪ್ರಾಪ್ತವಾಗುತ್ತದೆ.

ಕಃ ಪಂಡಿತಃ ಸನ್ ಸದಸದ್ವಿವೇಕೀ
   ಶ್ರುತಿಪ್ರಮಾಣಃ ಪರಮಾರ್ಥದರ್ಶೀ .
ಜಾನನ್ ಹಿ ಕುರ್ಯಾದಸತೋಽವಲಂಬಂ
   ಸ್ವಪಾತಹೇತೋಃ ಶಿಶುವನ್ಮುಮುಕ್ಷುಃ .. 336..

ಯಾವ ಪಂಡಿತನು ಸತ್-ಅಸತ್ ಗಳ ಅಂತರವನ್ನು ಅರಿತವನಾಗಿ, ಶೃತಿಪ್ರಮಾಣವನ್ನು ತಿಳಿದವನಾಗಿ, ಪರಮಾರ್ಥ ತತ್ವವನ್ನು ತಿಳಿದವನಾಗಿ, ಮುಮುಕ್ಷುವಾಗಿಯೂ ಸಹ, ಶಿಶುವಿನಂತೆ ತನ್ನ ಪತನಕ್ಕೆ ಕಾರಣವಾಗುವ ಅಸತ್ ಅನ್ನು ಅವಲಂಬಿಸುತ್ತಾನೆ?

ದೇಹಾದಿಸಂಸಕ್ತಿಮತೋ ನ ಮುಕ್ತಿಃ
   ಮುಕ್ತಸ್ಯ ದೇಹಾದ್ಯಭಿಮತ್ಯಭಾವಃ .
ಸುಪ್ತಸ್ಯ ನೋ ಜಾಗರಣಂ ನ ಜಾಗ್ರತಃ
   ಸ್ವಪ್ನಸ್ತಯೋರ್ಭಿನ್ನ ಗುಣಾಶ್ರಯತ್ವಾತ್ .. 337..

ಶರೀರ ಇತ್ಯಾದಿಗಳಲ್ಲಿ ಅಭಿಮಾನವುಳ್ಳವನಿಗೆ ಮುಕ್ತಿಯಿಲ್ಲ, ಮುಕ್ತನಾದವನಿಗೆ ಶರೀರಾದಿಗಳಲ್ಲಿ ಅಭಿಮಾನನಿರುವುದಿಲ್ಲ. ನಿದ್ರಿಸುತ್ತಿರುವವನಿಗೆ ಎಚ್ಚರವಿಲ್ಲ, ಎಚ್ಚರದಲ್ಲಿರುವವನಿಗೆ ನಿದ್ರೆಯಿಲ್ಲ; ಯಾಕೆಂದರೆ ಇವು ಪರಸ್ಪರ ವಿರುದ್ಧ ಗುಣಗಳು.

ಅಂತರ್ಬಹಿಃ ಸ್ವಂ ಸ್ಥಿರಜಂಗಮೇಷು
    ಜ್ಞಾತ್ವಾಽಽತ್ಮನಾಧಾರತಯಾ ವಿಲೋಕ್ಯ . 
ತ್ಯಕ್ತಾಖಿಲೋಪಾಧಿರಖಂಡರೂಪಃ
    ಪೂರ್ಣಾತ್ಮನಾ ಯಃ ಸ್ಥಿತ ಏಷ ಮುಕ್ತಃ .. 338..

ಸ್ಥಾವರ-ಜಂಗಮಗಳಲ್ಲೆಲ್ಲ, ಒಳಗೂ ಹೊರಗೂ ತನ್ನ ಆತ್ಮನನ್ನೇ ಕಂಡು, ಆತ್ಮನೇ ಅವುಗಳ ಆಧಾರವೆಂದು ಅರಿತುಕೊಂಡು, ಸಮಸ್ತ ಉಪಾಧಿಗಳನ್ನೂ ಬಿಟ್ಟವನಾಗಿ, ಪರಿಪೂರ್ಣಸ್ವರೂಪನಾಗಿ, ಸರ್ವಾತ್ಮ ಸ್ವರೂಪದಿಂದ ಯಾರು ಇರುವನೊ ಅವನೇ ಮುಕ್ತನು.

ಸರ್ವಾತ್ಮನಾ ಬಂಧವಿಮುಕ್ತಿಹೇತುಃ
    ಸರ್ವಾತ್ಮಭಾವಾನ್ನ ಪರೋಽಸ್ತಿ ಕಶ್ಚಿತ್ .
ದೃಶ್ಯಾಗ್ರಹೇ ಸತ್ಯುಪಪದ್ಯತೇಽಸೌ
    ಸರ್ವಾತ್ಮಭಾವೋಽಸ್ಯ ಸದಾತ್ಮನಿಷ್ಠಯಾ .. 339..

ಸಂಸಾರಬಂಧದಿಂದ ಮುಕ್ತನಾಗುವುದಕ್ಕೆ ಸರ್ವಾತ್ಮಭಾವಕ್ಕಿಂತ ಬೇರೆ ಯಾವ ದಾರಿಯೂ  ಇರುವುದಿಲ್ಲ.   ಈ ಸರ್ವಾತ್ಮಭಾವವು ಸದಾ ಆತ್ಮನಿಷ್ಠೆಯ ಮೂಲಕ ಇದ್ದು, ದೃಶ್ಯ ಜಗತ್ತನ್ನು ಗ್ರಹಿಸದೆ ಇದ್ದಾಗ ಉಂಟಾಗುತ್ತದೆ. (ಸ

ದೃಶ್ಯಸ್ಯಾಗ್ರಹಣಂ ಕಥಂ ನು ಘಟತೇ ದೇಹಾತ್ಮನಾ ತಿಷ್ಠತೋ
    ಬಾಹ್ಯಾರ್ಥಾನುಭವಪ್ರಸಕ್ತಮನಸಸ್ತತ್ತತ್ಕ್ರಿಯಾಂ ಕುರ್ವತಃ .
ಸಂನ್ನ್ಯಸ್ತಾಖಿಲಧರ್ಮಕರ್ಮವಿಷಯೈರ್ನಿತ್ಯಾತ್ಮನಿಷ್ಠಾಪರೈಃ
    ತತ್ತ್ವಜ್ಞೈಃ ಕರಣೀಯಮಾತ್ಮನಿ ಸದಾನಂದೇಚ್ಛುಭಿರ್ಯತ್ನತಃ .. 340..

ದೇಹದ ಜೊತೆ ತಾದಾತ್ಮ್ಯಭಾವದಿಂದ ಕೂಡಿ, ಬಾಹ್ಯ ಅನುಭವದಲ್ಲಿ ಮನಸ್ಸುಳ್ಳವನಾಗಿ, ಅವುಗಳಿಗೆ ಬೇಕಾದ ಕರ್ಮವನ್ನು ಮಾಡುತ್ತಿರುವವನಿಗೆ, ದೃಶ್ಯ ಜಗತ್ತನ್ನು (ಬಾಹ್ಯ ಜಗತ್ತನ್ನು)  ಪರಿಗ್ರಹಿಸದೇ ಇರಲು ಹೇಗೆ ಸಾಧ್ಯವಾಗುತ್ತದೆ? ಸಮಸ್ತಧರ್ಮಗಳನ್ನೂ ಕರ್ಮಗಳನ್ನೂ ವಿಷಯಗಳನ್ನೂ ತೊರೆದು, ನಿತ್ಯ ಆತ್ಮನಿಷ್ಠೆಯಲ್ಲಿ ಆಸಕ್ತರಾಗಿ, ಸದಾನಂದವನ್ನು ಬಯಸುವ ತತ್ತ ಜ್ಞರಿಂದಲೇ (ಈ ದೃಶ್ಯಜಗತ್ತಿನ ಅಪರಿಗ್ರಹವನ್ನು) ಮುತವರ್ಜಿಯಿಂದ ಮಾಡತಕ್ಕದ್ದು. 
 
ಸರ್ವಾತ್ಮಸಿದ್ಧಯೇ ಭಿಕ್ಷೋಃ ಕೃತಶ್ರವಣಕರ್ಮಣಃ .
ಸಮಾಧಿಂ ವಿದಧಾತ್ಯೇಷಾ ಶಾಂತೋ ದಾಂತ ಇತಿ ಶ್ರುತಿಃ .. 341..

 
ವೇದಾಂತಶ್ರವಣ ಮಾಡಿ ಆತ್ಮಸಿದ್ಧಿಯನ್ನು ಬಯಸುವ ಭಿಕ್ಷುವಿಗೆ ಸರ್ವಾತ್ಮಭಾವ ಸಿದ್ಧಿಗಾಗಿ  'ಶಾಂತ ದಾಂತ' ಎಂಬ ಮಾತು ಸಮಾಧಿಯ ಮಾರ್ಗವನ್ನು ತಿಳಿಸುತ್ತದೆ. 
(ಆದುದರಿಂದ ಹೀಗೆ ಅರಿತುಕೊಂಡಿರುವವನು ಶಾಂತನೂ ದಾಂತನೂ ಉಪರತನೂ ತಿತಿಕ್ಪುವೂ ಸಮಾಹಿತನೂ ಆಗಿ ತನ್ನ ಶರೀರದಲ್ಲಿಯೇ ಆತ್ಮನನ್ನು ನೋಡುತ್ತಾನೆ, ಸರ್ವವನ್ನೂ ಆತ್ಮವನ್ನಾಗಿ ನೋಡುತ್ತಾನೆ - ಬ್ರಹದಾರಣ್ಯಕ ಉಪನಿಷತ್)
 
ಆರೂಢಶಕ್ತೇರಹಮೋ ವಿನಾಶಃ
    ಕರ್ತುನ್ನ ಶಕ್ಯ ಸಹಸಾಪಿ ಪಂಡಿತೈಃ .
ಯೇ ನಿರ್ವಿಕಲ್ಪಾಖ್ಯಸಮಾಧಿನಿಶ್ಚಲಾಃ
    ತಾನಂತರಾಽನಂತಭವಾ ಹಿ ವಾಸನಾಃ .. 342..

 
ಪಂಡಿತರಿಗೂ ಸಹ  ಒಮ್ಮೆ ಬಲಗೊಂಡ ಮೇಲೆ ಅಹಂಕಾರವನ್ನು ಸುಲಭವಾಗಿ ನಾಶಪಡಿಸಲು ಆಗುವದಿಲ್ಲ. ಯಾಕೆಂದರೆ ನಿರ್ವಿಕಲ್ಪನಾಗಿ ಸಮಾಧಿನಿಶ್ಚಲನಾದವನಲ್ಲೂ ಅನಂತ ಜನ್ಮಗಳ ಸಂಸ್ಕಾರವು ಪ್ರಬಲವಾಗಿರುತ್ತದೆ.
 
ಅಹಂಬುದ್ಧ್ಯೈವ ಮೋಹಿನ್ಯಾ ಯೋಜಯಿತ್ವಾಽಽವೃತೇರ್ಬಲಾತ್ .
ವಿಕ್ಷೇಪಶಕ್ತಿಃ ಪುರುಷಂ ವಿಕ್ಷೇಪಯತಿ ತದ್ಗುಣೈಃ .. 343..

 
ವಿಕ್ಷೇಪಶಕ್ತಿ ಯು ಆವರಣಶಕ್ತಿಯ ಬಲದ ಮೂಲಕ ಮನುಷ್ಯನನ್ನು ಅಹಂಬುದ್ದಿಯೆಂಬ ಮೋಹಿನಿಯೊಂದಿಗೆ ಸೇರಿಕೊಂಡು ಅದರ ಗುಣಗಳಿಂದ ಅವನನ್ನು ದಾರಿತಪ್ಪಿಸುತ್ತದೆ.
 
ವಿಕ್ಷೇಪಶಕ್ತಿವಿಜಯೋ ವಿಷಮೋ ವಿಧಾತುಂ
    ನಿಃಶೇಷಮಾವರಣಶಕ್ತಿನಿವೃತ್ತ್ಯಭಾವೇ .
ದೃಗ್ದೃಶ್ಯಯೋಃ ಸ್ಫುಟಪಯೋಜಲವದ್ವಿಭಾಗೇ
    ನಶ್ಯೇತ್ತದಾವರಣಮಾತ್ಮನಿ ಚ ಸ್ವಭಾವಾತ್ .
ನಿಃಸಂಶಯೇನ ಭವತಿ ಪ್ರತಿಬಂಧಶೂನ್ಯೋ
    ವಿಕ್ಷೇಪಣಂ ನ ಹಿ ತದಾ ಯದಿ ಚೇನ್ಮೃಷಾರ್ಥೇ .. 344..

 
ನಮ್ಮನ್ನು ಆವರಿಸಿರುವ ಕವಚವನ್ನು (ವಿಷಯವಾಸನೆಗಳ) ತೊಲಗಿಸಿಕೂಳ್ಳದಿದ್ದರೆ ವಿಕ್ಷೇಪಶಕ್ತಿಯನ್ನು ನಿಃಶೇಷವಾಗಿ ಜಯಿಸಿಕೊಳ್ಳುವುದು ಕಷ್ಟ. ದೃಗ್ರೂಪನಾದ ಆತ್ಮ, ಮತ್ತು ದೃಶ್ಯವಾದ ಜಗತ್ತು ಇವೆರಡನ್ನೂ —(ಹಂಸವು) ಹಾಲುನೀರುಗಳನ್ನು ವಿಂಗಡಿಸುವಂತೆ ವಿಂಗಡಿಸಿದಾಗ ಆವರಣವು(ಕವಚ) ತಾನಾಗಿಯೇ ನಾಶವಾಗುವುದು. ಮಿಥ್ಯಾ ಭೂತವಾದ ಅನಾತ್ಮನ ಕಾರಣದಿಂದ (ಮನಸ್ಸು) ಗೊಂದಲಗೊಳ್ಳದಿದ್ದರೆ , (ವಿಕ್ಷೇಪಶಕ್ತಿಯನ್ನು ಗೆಲ್ಲುವುದು) ನಿಃಸಂಶಯವಾಗಿ ಪ್ರತಿಬಂಧವಿಲ್ಲದೆ ಆಗುವುದು.
 
ಸಮ್ಯಗ್ವಿವೇಕಃ ಸ್ಫುಟಬೋಧಜನ್ಯೋ
ವಿಭಜ್ಯ ದೃಗ್ದೃಶ್ಯಪದಾರ್ಥತತ್ತ್ವಂ .
ಛಿನತ್ತಿ ಮಾಯಾಕೃತಮೋಹಬಂಧಂ
ಯಸ್ಮಾದ್ವಿಮುಕ್ತಸ್ತು ಪುನರ್ನ ಸಂಸೃತಿಃ .. 345..

 
ಸ್ಫುಟವಾದ ಜ್ಞಾನದಿಂದ ಉತ್ಪನ್ನವಾದ ಸಮ್ಯಕ್ ವಿವೇಕವು, ದೃಗ್ರೂಪನಾದ ಆತ್ಮ ಮತ್ತು ದೃಶ್ಯರೂಪವಾದ ಪ್ರಪಂಚಗಳನ್ನು ವಿಂಗಡಿಸಿ, ಮಾಯಾಕೃತವಾದ ಮೋಹದ ಬಂಧನವನ್ನು ಕತ್ತರಿಸುತ್ತದೆ. ಆ ಬಂಧನದಿಂದ ಮುಕ್ತನಾದವನಿಗೆ ಪುನಃ ಸಂಸಾರಬಂಧನವಿರುವದಿಲ್ಲ. (ಪುನಃಜನ್ಮವಿರುವದಿಲ್ಲ)
 
ಪರಾವರೈಕತ್ವವಿವೇಕವಹ್ನಿಃ
ದಹತ್ಯವಿದ್ಯಾಗಹನಂ ಹ್ಯಶೇಷಂ .
ಕಿಂ ಸ್ಯಾತ್ಪುನಃ ಸಂಸರಣಸ್ಯ ಬೀಜಂ
ಅದ್ವೈತಭಾವಂ ಸಮುಪೇಯುಷೋಽಸ್ಯ .. 346..

 
ಜೀವ ಮತ್ತು ಈಶ್ವರ ಇಬ್ಬರೂ ಒಂದೇ ಎಂಬ ವಿವೇಕವು ಅವಿದ್ಯೆಯ ಕಾಡನ್ನು ನಿಶ್ಶೇಷವಾಗಿ ಸುಡುತ್ತದೆ. ಅದ್ವೈತಭಾವವನ್ನೂ ಚೆನ್ನಾಗಿ ಪಡೆದಿರುವ ಜ್ಞಾನಿಗೆ ಪುನಃ ಸಂಸಾರಕ್ಕೆ ಬರಲು ಯಾವ ಕಾರಣ ಇದ್ದೀತು?
 
ಆವರಣಸ್ಯ ನಿವೃತ್ತಿರ್ಭವತಿ ಹಿ ಸಮ್ಯಕ್ಪದಾರ್ಥದರ್ಶನತಃ .
ಮಿಥ್ಯಾಜ್ಞಾನವಿನಾಶಸ್ತದ್ವಿಕ್ಷೇಪಜನಿತದುಃಖನಿವೃತ್ತಿಃ .. 347..

 
ಪರಮಾರ್ಥವನ್ನು ಚೆನ್ನಾಗಿ ಸಾಕ್ಷಾತ್ಕಾರ ಮಾಡಿಕೊಳ್ಳುವದರಿಂದ ಆವರಣ ಹೊರಟುಹೋಗುತ್ತದೆ. ಮಿಥ್ಯಾಜ್ಞಾನವೂ ಹೋಗುತ್ತದೆ. ಹಾಗೆಯೇ ವಿಕ್ಷೇಪದಿಂದ ಉಂಟಾಗುವ ದುಃಖವೂ ಹೋಗುತ್ತದೆ.
 
ಏತತ್ತ್ರಿತಯಂ ದೃಷ್ಟಂ ಸಮ್ಯಗ್ರಜ್ಜುಸ್ವರೂಪವಿಜ್ಞಾನಾತ್ .
ತಸ್ಮಾದ್ವಸ್ತುಸತತ್ತ್ವಂ ಜ್ಞಾತವ್ಯಂ ಬಂಧಮುಕ್ತಯೇ ವಿದುಷಾ .. 348..

 
ಹಗ್ಗದ ಸ್ವರೂಪವನ್ನುಚನ್ನಾಗಿ ಅರಿತುಕೊಂಡದ್ದರಿಂದ ಈ ಮೂರು ಕಂಡುಬರುತ್ತವೆ (ಆವರಣ - ಹಗ್ಗವು ಹಾವು ಎಂಬ ತಪ್ಪು ಕಲ್ಪನೆ, ಅದರಿಂದಾಗುವ ಮಿಥ್ಯಾಜ್ಞಾನ, ಅದರಿಂದ ದುಃಖ). ಆದುದುರಿಂದ ಮುಮುಕ್ಷುವು ಸಂಸಾರಬಂಧನದ ನಿವೃತ್ತಿಗಾಗಿ ವಸ್ತುವಿನ ಯಥಾರ್ಥವವನ್ನು ತಿಳಿದುಕೊಳ್ಳಬೇಕು.
 
ಅಯೋಽಗ್ನಿಯೋಗಾದಿವ ಸತ್ಸಮನ್ವಯಾನ್
ಮಾತ್ರಾದಿರೂಪೇಣ ವಿಜೃಂಭತೇ ಧೀಃ .
ತತ್ಕಾರ್ಯಮೇತದ್ದ್ವಿತಯಂ ಯತೋ ಮೃಷಾ  
ದೃಷ್ಟಂ ಭ್ರಮಸ್ವಪ್ನಮನೋರಥೇಷು .. 349..


ತತೋ ವಿಕಾರಾಃ ಪ್ರಕೃತೇರಹಮ್ಮುಖಾ
ದೇಹಾವಸಾನಾ ವಿಷಯಾಶ್ಚ ಸರ್ವೇ .
ಕ್ಷಣೇಽನ್ಯಥಾಭಾವಿತಯಾ ಹ್ಯಮೀಷಾ-  
ಮಸತ್ತ್ವಮಾತ್ಮಾ ತು ಕದಾಪಿ ನಾನ್ಯಥಾ .. 350..  

 
ಅಗ್ನಿಯಿಂದ ಕಬ್ಬಿಣವು ಕಾದು ಕೆಂಪಾಗುವಂತೆ ಸತ್ ವಸ್ತುವಾದ ಆತ್ಮನ ಸಂಪರ್ಕದಿಂದ ಬುದ್ಧಿಯು ಪ್ರಮಾಣ, ಪ್ರಮೇಯ  ಈ ರೂಪದಿಂದ ತೋರಿಕೊಳ್ಳುತ್ತದೆ. ಇವೆರಡು - ಬುದ್ಧಿಯ ಪರಿಣಾಮದಿಂದ ತೋರಿಬರುವ ಇವೆರಡು ಮಿಥ್ಯೆಯಾಗಿವೆ - ಇದು ಸ್ವಪ್ನ, ಕಲ್ಪನೆ ಹಾಗೂ ಭ್ರಮೆಗಳಲ್ಲಿ ಕಂಡುಬರುತ್ತದೆ.
ಆದುದರಿಂದ ಅಹಂಕಾರದಿಂದ ಆರಂಭಿಸಿ ದೇಹದತನಕ ಪೃಕೃತಿ ವಿಕಾರ ವಿಷಯಗಳೆಲ್ಲ ಅಸತ್ಯವಾಗಿವೆ. ಯಾಕೆಂದರೆ ಅವು
ಕ್ಷಣಕ್ಷಣಕ್ಕೆ ಬದಲಾಗುತ್ತವೆ; ಆದರೆ ಆತ್ಮ ಎಂದೂ ಬದಲಾಗುವದಿಲ್ಲ.

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60